Home ಅಪರಾಧ ಲೋಕ ಕುದುರೇಮುಖ ರಾಷ್ಟ್ರೀಯ ಉದ್ಯಾನ ವನದೊಳಗೆ ಚಿರತೆ ಬೇಟೆ; ತನಿಖೆ ಚುರುಕುಗೊಳಿಸಿದ ಅರಣ್ಯ ಇಲಾಖೆ.

ಕುದುರೇಮುಖ ರಾಷ್ಟ್ರೀಯ ಉದ್ಯಾನ ವನದೊಳಗೆ ಚಿರತೆ ಬೇಟೆ; ತನಿಖೆ ಚುರುಕುಗೊಳಿಸಿದ ಅರಣ್ಯ ಇಲಾಖೆ.

30
0

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯ ಸವಣಾಲು ಗ್ರಾಮದ ಇತ್ತಿಲಪೇಲ ಅರಣ್ಯ ಪ್ರದೇಶದಲ್ಲಿ ಭಾನುವಾರ ಚಿರತೆಯ ಮೂಳೆಗಳು ಪತ್ತೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯವರು 1972 ರ ವನ್ಯ ಜೀವಿ ಕಾಯ್ದೆಯ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನವನದ ಒಳಗೆ ಚಿರತೆಯನ್ನು ಬೇಟೆಯಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯನಿಗೆ ಪ್ರವೇಶ ನಿರಾಕರಿಸಲಾಗಿರುವ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ವನ್ಯ ಜೀವಿಯಾಗಿರುವ ಚಿರತೆಯ ಬೇಟೆ ನಡೆದಿರುವುದನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ವನ್ಯಜೀವಿ ವಿಭಾಗದ ಡಿ.ಎಫ್ ಒ ಶಿವರಾಮ ಬಾಬು ಅವರು ಮಾರ್ಗದರ್ಶನದಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪಶು ವೈದ್ಯರ ಸಹಕಾರದಲ್ಲಿ ಚಿರತೆಯ ಮೂಳೆಗಳನ್ನು ಸಂಗ್ರಹಿಸಲಾಗಿದ್ದು ಅವುಗಳನ್ನು ಚೆನ್ನೈನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಸಂಬಂಧಿಸಿದ ಎನ್.ಜಿ.ಒ ಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು ಪ್ರಯೋಗಾಲಯದ ವರದಿಯಿಂದ ಚಿರತೆಯ ಪ್ರಾಯ ಹಾಗೂ ಇತರ ವಿಚಾರಗಳು ಸ್ಪಷ್ಟವಾಗಲಿದೆ ಆದರೆ ಸಾವಿಗೆ ಕಾರಣ ತಿಳಿದು ಬರಲಿದೆಯೇ ಎಂಬುದು ಸ್ಪಷ್ಟವಿಲ್ಲ.

ತನಿಖೆಗೆ ದಿಕ್ಕು ಬದಲಿಸಿದ ಫೊಟೋ;

ಸವಣಾಲಿನಲ್ಲಿ ರಾಷ್ಟ್ರೀಯ ಉದ್ಯಾನವನದೊಳಗೆ ಚಿರತೆ ಸಾವನ್ನಪ್ಪಿರುವ ಬಗ್ಗೆ ತಿಳಿದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಅಲ್ಲಿಗೆ ತರಳುವ ವೇಳೆ ಚಿರತೆಯ ದೇಹ ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಕೇವಲ ಮೂಳೆಗಳು ಮಾತ್ರ ಪತ್ತೆಯಾಗಿತ್ತು. ಆದರೆ ಈ ವೇಳೆಗೆ ಕಾಲುಗಳ ಉಗುರುಗಳನ್ನು ಕತ್ತರಿಸಿ ತೆಗೆದಿರುವ ಸ್ಥಿತಿಯಲ್ಲಿ ಬಿದ್ದಿರುವ ಚಿರತೆಯ ಕಳೇಬರದ ಫೊಟೋವೊಂದು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತ್ತು ಈ ಫೊಟೋದಲ್ಲಿ ಕಾಣುವ ಸ್ಥಳದಲ್ಲಿಯೇ ಚಿರತೆಯ ಮೂಳೆಗಳು ಪತ್ತೆಯಾಗಿದ್ದು ಇದನ್ನು ಗಮನಿಸಿದಾಗ ಚಿತ್ರದಲ್ಲಿ ಕಾಣುತ್ತಿರುವ ಕಾಲು ಕತ್ತರಿಸಿದ ಚಿರತೆಯ ಎಲುಬುಗಳೆ ಇಲ್ಲಿ ಪತ್ತೆ ಯಾಗಿರುವುದು ಬಹುತೇಕ ಖಚಿತವಾಗಿದೆ. ಅದೇರೀತಿ ಮೂಳೆಗಳು ಪತ್ತೆಯಾದ ಸ್ಥಳದಲ್ಲಿ ಚಿರತೆಯ ಉಗುರುಗಳು ಪತ್ತೆಯಾಗಿಲ್ಲ ಎಂಬುದು ಮಹತ್ವದ ವಿಚಾರವಾಗಿದೆ.
ಚಿರತೆಯ ಸಾವಿನ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸುವ ವಾರಗಳ ಹಿಂದೆ ತೆಗೆದ ಫೊಟೋ ಇದಾಗಿದ್ದು ಈ ಫೊಟೊವನ್ನು ಕೇಂದ್ರವಾಗಿಸಿಕೊಂಡು ಅರಣ್ಯ ಇಲಾಖೆಯವರು ತನಿಖೆ ನಡೆಸುತ್ತಿದ್ದಾರೆ.


ಪ್ರಕರಣದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದು ಒಂದೋ ಚಿರತೆಗೆ ಗುಂಡಿಕ್ಕಿ ಅಥವಾ ಇನ್ಯಾವುದೋ ರೀತಿಯಲ್ಲಿ ಹತ್ಯೆ ಮಾಡಿ ಅದರ ಉಗುರುಗಳನ್ನು ಕತ್ತರಿಸಿ ತೆಗೆಯಲಾಗಿದೆ. ಇಲ್ಲವಾದಲ್ಲಿ ಸ್ವಾಭಾವಿಕವಾಗಿ ಸತ್ತ ಚಿರತೆಯ ಕಾಲನ್ನು ಯಾರೋ ಕತ್ತರಿಸಿ ಉಗುರುಗಳನ್ನು ತೆಗೆದಿದ್ದಾರೆ. ಈ ಎರಡೂ ಸಾಧ್ಯತೆಗಳನ್ನು ಮುಂದಿಟ್ಟು ಅರಣ್ಯ ಇಲಾಖೆಯವರು ತನಿಖೆ ಮುಂದುವರಿಸಿದ್ದಾರೆ.

ಚಿರತೆ ಯಾವರೀತಿ ಮೃತಪಟ್ಟಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ ಸಾಕ್ಷಿಯಾಗಿರುವ ಈ ಫೊಟೊವನ್ನು ಮುಂದಿಟ್ಟು ತನಿಖೆ ನಡೆಸಲಾಗುತ್ತಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿಗಳು ಸಿಗಬಹುದು ಎಂಬ ನಿರೀಕ್ಷೆಯಿದೆ ಸ್ಥಳೀಯ ಅರಣ್ಯ ಪ್ರದೇಶದಲ್ಲಿ ತನಿಖೆಯನ್ನು ಮುಂದುವರಿಸಲಾಗಿದೆ

ಶಿವರಾಮ ಬಾಬು

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿಭಾಗದ ಡಿಎಫ್ ಒ

LEAVE A REPLY

Please enter your comment!
Please enter your name here