


ಬೆಳ್ತಂಗಡಿ; ಪೂಂಜಾಲಕಟ್ಟೆಯಿಂದ ಚಾರ್ಮಾಡಿಯ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭಾರದಿಂದ ನಡೆಯುತ್ತಿದೆ. ಆದರೆ ಕಾಮಗಾರಿಯ ವೇಳೆ ಸುರಕ್ಷಾ ಕ್ರಮಗಳನ್ನೂ ಸಮರ್ಪಕವಾಗಿ ಕೈಗೊಳ್ಳದೆ ಕಾಮಗಾರಿಗಳು ನಡೆಯುತ್ತಿದ್ದು ವಾಹನಗಳ ಅಪಘಾತಗಳಿಗೆ ಕಾರಣವಾಗುತ್ತಿದೆ.
ರಸ್ತೆಬದಿಯಲ್ಲಿ ನಿರ್ಮಿಸುತ್ತಿರುವ ಬೃಹತ್ ಕಾಂಕ್ರೀಟ್ ಚರಂಡಿಗಳೇ ಅಪಘಾತಗಳ ಕೇಂದ್ರಗಳಾಗುತ್ತಿದೆ. ರಸ್ತೆಯ ಬದಿಯಲ್ಲಿ ಹಲವೆಡೆ ಅಗೆದು ಹಾಕಲಾಗಿದೆ ಹಲವೆಡೆ ತೆರೆದ ಚರಂಡಿ ಇದೆ ಇನ್ನೂ ಹಲವೆಡೆ ಕಬ್ಬಿಣದ ರಾಡ್ ಗಳನ್ನು ಕಟ್ಟಿ ಬಿಡಲಾಗಿದೆ. ಇದು ಕಾಮಗಾರಿ ನಡೆಯುವಾಗ ಸಹಜ ಆದರೆ ಕಿರಿದಾದ ತಾತ್ಕಾಲಿಕ ರಸ್ತೆಗಳ ಬದಿಯಲ್ಲಿ ಈ ರೀತಿ ಚರಂಡಿಗಳಿದ್ದು ಒಂದಿಷ್ಟು ಕಣ್ಣು ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕಾಮಗಾರಿ ನಡೆಯುವ ಹಲವೆಡೆ ಕನಿಷ್ಟ ಟೇಪ್ ಗಳನ್ನೂ ಕಟ್ಟಲಾಗಿಲ್ಲ,ಸೂಚನಾ ಫಲಕಗಳೂ ಇಲ್ಲ ಇದರಿಂದಾಗಿ ರಾತ್ರಿ ವೇಳೆ ವಾಹನಗಳಿಗೆ ಸೈಡ್ ಕೊಡುವಾಗ ನಿಯಂತ್ರಣ ತಪ್ಪಿ ವಾಹನಗಳು ಚರಂಡಿಗೆ ಉರುಳುತ್ತಿದೆ. ಬೈಕ್ ಸವಾರರಂತೂ ಅತ್ಯಂತ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ. ಒಂದಿಷ್ಟು ನಿಯಂತ್ರಣ ಕಳೆದುಕೊಂಡರೆ ಎದ್ದು ನಿಂತಿರುವ ಕಬ್ಬಿಣದ ಸರಳುಗಳು ಜೀವವನ್ನೇ ಕಸಿಯಬಹುದು.

ಕಾಮಗಾರಿ ನಡೆಯುತ್ತಿರುವಾಗ ಗುತ್ತಿಗರ ದಾರರು ವಾಹಮ ಸವಾರರಿಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡುವ ನೀಡುವ ಫಲಕಗಳನ್ನು ಹಾಕಬೇಕು ಹಾಗೂ ಕಿರಿದಾದ ರಸ್ತೆಯ ಬದಿಯ ಚರಂಡಿಯ ಬಗ್ಗೆ ಚಾಲಕರಿಗೆ ಗೊತ್ತಾಗುವ ಹಾಗೆ ಬದಿಯಲ್ಲಿ ಕನಿಷ್ಟ ಟೇಪ್ ಗಳನ್ನಾದರೂ ಹಾಕಬೇಕಾಗಿದೆ.
ಹೆದ್ದಾರಿಯಲ್ಲಿ ಮುಂಡಾಜೆ ಪರಿಸರದಲ್ಲಿ,ಉಜಿರೆ ಕಾಶಿಬೆಟ್ಟುವಿನಲ್ಲಿ, ಬೆಳ್ತಂಗಡಿ ಚರ್ಚ್ ರೋಡ್ ಸಮೀಪ ಹಾಗೂ ಇತರೆಡೆ ಇದೇ ಸ್ಥಿತಿಯಿದ್ದು ಗುತ್ತಿಗೆ ದಾರರು ಈ ಬಗ್ಗೆ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಯಿಸುತ್ತಿದ್ದಾರೆ.
