ಬೆಳ್ತಂಗಡಿ; ಈ ಶಾಲೆಯು ಜಿಲ್ಲೆಯಲ್ಲಿ ಮಾದರಿಯ ರೀತಿಯಲ್ಲಿ ಕಾರ್ಯವನ್ನು ಮಾಡುತ್ತಿದ್ದು ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವ ಈ ಸಂಸ್ಥೆಯ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಹಾಗೂ ಇದಕ್ಕೆ ಕಾರಣೀಭೂತರಾದ ಸಂಸ್ಥೆಯ ಶಿಕ್ಷಕ ಬಳಗಕ್ಕೆ ವಿಶೇಷ ಕೃತಜ್ಞತೆಗಳು. ತಮ್ಮ ಈ ರೀತಿಯ ಕಾರ್ಯ ಸದಾ ಮುಂದುವರಿಯಲಿ. ನಮ್ಮ ಸಹಕಾರ ಸದಾ ನಿಮ್ಮೊಂದಿಗಿದೆ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಪದ್ಮನಾಭರವರು ಹೇಳಿದರು.
ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ನನ್ನ ಮಗು-ನನ್ನಗಿಡ ಧ್ಯೇಯ ವಾಕ್ಯದೊಂದಿಗೆ ಗಿಡ ವಿತರಣೆ
ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ 9ನೇ ತರಗತಿಗೆ ಸೇರ್ಪಡೆಗೊಳ್ಳುತ್ತಿರುವ ಎಲ್ಲ 155 ವಿದ್ಯಾರ್ಥಿಗಳಿಗೆ ಪ್ರಸ್ತುತ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನನ್ನ ಮಗು- ನನ್ನ ಗಿಡ ಎಂಬ ಧ್ಯೇಯವಾಕ್ಯದೊಂದಿಗೆ ಸಸಿಗಳನ್ನು ನೀಡುವ ಕಾರ್ಯವನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ದಿವಾಕರ್ ಶೆಟ್ಟಿ ಅವರು ಗಿಡ ಹಸ್ತಾಂತರ ಮಾಡುವುದರೊಂದಿಗೆ ನೆರವೇರಿಸಿದರು. ಆ ಬಳಿಕ ವಿದ್ಯಾರ್ಥಿಗಳನ್ನು ಶಾಲೆಗೆ ಬ್ಯಾಂಡ್ ವಾದನದೊಂದಿಗೆ ಬರಮಾಡಿ ಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಶಾಲಾ ಮೈದಾನದಲ್ಲಿ ನೂತನ ರೀತಿಯಲ್ಲಿ ಗಿಡಗಳನ್ನು ಪ್ರದರ್ಶಿಸಿ ಪಥ ಸಂಚಲನವನ್ನು ನಡೆಸಿದರು. ಗಿಡವನ್ನು ಸ್ವೀಕರಿಸಿರುವ 9ನೇ ತರಗತಿಯ ವಿದ್ಯಾರ್ಥಿಗಳು ಈ ಗಿಡವನ್ನು ತಮ್ಮ ತಮ್ಮ ಮನೆಯಲ್ಲಿ ನೆಟ್ಟು ಪೋಷಿಸಿ ಬೆಳೆಸುತ್ತೇವೆ ಎನ್ನುವ ಮನ ಪ್ರತಿಜ್ಞೆಯನ್ನು ಮಾಡಿದರು.

ಈ ವರ್ಷದ ಪುಂಜಾಲಕಟ್ಟೆ ಶಾಲೆಯ ಧ್ಯೇಯ ವಾಕ್ಯ ನಮ್ಮ ನಡೆ- ಮೌಲ್ಯಾಧಾರಿತ ಶಿಕ್ಷಣದ ಕಡೆ ಎಂದು ಸಂಸ್ಥೆಯ ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ ಯವರು ಘೋಷಿಸಿದರು.
ಸಭಾಧ್ಯಕ್ಷತೆಯನ್ನು ಉದಯಕುಮಾರ್ ಬಿ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿ ಸಂದರ್ಭೋಚಿತವಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಕಿವಿ ಮಾತನ್ನು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಸಂಪಿಗೆತಾಯ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಇಲಾಖೆಯಿಂದ ನೀಡಲಾದ ಸಮವಸ್ತ್ರ, ಪಠ್ಯಪುಸ್ತಕ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಬಳಿಕ ಎಲ್ಲಾ ವಿಧ್ಯಾರ್ಥಿಗಳಿಗೆ ಸಿಹಿ ಬೋಜನದ ವ್ಯವಸ್ಥೆ ಮಾಡಲಾಗಿತ್ತು.


ಶಾಲಾ ಶಿಕ್ಷಕರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡರೆ, ವಿಜ್ಞಾನ ಶಿಕ್ಷಕರಾದ ನಿರಂಜನ್ ಜೈನ್ ಐ ಸ್ವಾಗತಿಸಿದರು, ಆಂಗ್ಲ ಭಾಷೆ ಶಿಕ್ಷಕರಾದ ಹರಿಪ್ರಸಾದ್ ಆರ್ ವಂದಿಸಿದರು, ಸಮಾಜ ವಿಜ್ಞಾನ ಶಿಕ್ಷಕರಾದ ಧರಣೇಂದ್ರ ಕೆ ರವರು ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು.