

ಬೆಳ್ತಂಗಡಿ; ಬೆಳ್ತಂಗಡಿ ಗೆ ಮಂಜೂರಾಗಿ ಆರಂಭವಾಗಿರುವ ಪೊಲೀಸ್ ಉಪ ವಿಭಾಗವನ್ನು ರದ್ದು ಪಡಿಸುವ ಪ್ರಯತ್ನ ನಡೆಯುತ್ತಿದೆ ಬೆಳ್ತಂಗಡಿ ತಾಲೂಕಿಗೆ ಇದು ಅತ್ಯಂತ ಅಗತ್ಯವಾಗಿದ್ದು ಯಾವುದೇ ಕಾರಣಕ್ಕೂ ಉಪವಿಭಾಗವನ್ನು ರದ್ದು ಪಡಿಸಬಾರದು ಎಂದು ದಲಿತ ಮುಖಂಡ ಶೇಖರ ಲಾಯಿಲ ಹಾಗು ಇತರರು ಒತ್ತಾಯಿಸಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ ರವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂತು. ಶಾಸಕ ಹರೀಶ್ ಪೂಂಜ ಅವರು ಉಪ ವಿಭಾಗ ಬೇಡ ಎಂದು ಅದನ್ನು ರದ್ದುವಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ ಯಾವುದೇ ಕಾರಣಕ್ಕೂ ಉಪ ವಿಭಾಗ ರದ್ದು ಪಡಿಸ ಬಾರದು ಎಂದು ಒತ್ತಾಯಿಸಿದರು. ಇದಕ್ಕೆ ನೇಮಿರಾಜ್ ಕಿಲ್ಲೂರು ಬಿ.ಕೆ ವಸಂತ್ ಹಾಗು ಇತರರು ಧ್ಚನಿಗೂಡಿಸಿದರು.
ಜಮೀನು , ರಸ್ತೆ ವಿವಾದಗಳಲ್ಲಿ ಮೇಲ್ಜಾತಿಯವರು ಆಮಿಷ ಒಡ್ಡಿ ದಲಿತ ಸಮುದಾಯವನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು , ಸತ್ಯಕ್ಕೆ ದೂರವಾದ ದಲಿತ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ದಲಿತಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವಿಭಾಗೀಯ ಸಂಚಾಲಕ ಬಿ.ಕೆ ವಸಂತ್ ಒತ್ತಾಯಿಸಿದರು.
ಇದಕ್ಕೆ ಬೆಂಬಲ ಸೂಚಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ , ನಿಜವಾಗಿ ದೌರ್ಜನ್ಯ , ಹಿಂಸೆ ಅನುಭವಿಸುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ದಲಿತ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂದಿದೆ , ಅದರ ದುರುಪಯೋಗ ಸರಿಯಲ್ಲ ಎಂದರು.
ಹಿರಿಯ ದಲಿತ ಮುಖಂಡ ವೆಂಕಣ್ಣ ಕೊಯ್ಯುರು ಮಾತನಾಡಿ ಕೊಯ್ಯುರು ಗ್ರಾಮದಲ್ಲಿ ಸರಕಾರಿ ಜಮೀನು ಒತ್ತುವರಿ ವಿವಾದದಲ್ಲಿ ದಲಿತ ಯುವಕರನ್ನು ದುರುಪಯೋಗ ಮಾಡಿಕೊಂಡು ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದರು. ಈ ಬಗ್ಗೆ ಮಾತನಾಡಿದ ಡಿವೈಎಸ್ಪಿ ರವರು ಯಾರೇ ದೂರು ಕೊಟ್ಟರು ಅದನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ , ವಿಚಾರಣೆಯ ಹಂತದಲ್ಲಿ ಸುಳ್ಳು ಎಂದು ಸಾಬೀತು ಆದಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗುತ್ತದೆ ಎಂದರು.
ಸತೀಶ್ ಪಾರೆಂಕಿ ಮಾತನಾಡಿ ಕೆಲಸದ ಸ್ಥಳಗಳಲ್ಲಿ ಜಾತಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತದೆಅದರ ವಿರುದ್ಧ ಮಾತನಾಡಿದರೆ ನಮ್ಮ ಮೇಲೆ ವಿವಿಧ ರೀತಿಯ ದೌರ್ಜನ್ಯಗಳನ್ನು ಎದುರಿಸಬೇಕಾಗುತ್ತದೆ ಎಂದರು. 15 ವರ್ಷಗಳ ಹಿಂದೆ ಹಿರಿಯ ದಲಿತ ನಾಯಕ ಶಿವಪ್ಪ ಬಂಗೇರರ ಕೊಲೆ ನಡೆದಿದ್ದು , ಇಲ್ಲಿಯ ತನಕ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೋಲಿಸ್ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಹಳೆಯ ಪ್ರಕರಣವಾಗಿರುವ ಕಾರಣ ಕಡತಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಪ್ರಭಾಕರ್ ಕನ್ಯಾಡಿ ಮಾತನಾಡಿ ಗ್ರಾಮ ಪಂಚಾಯತ್ ಗಳಲ್ಲಿ ಕಾಮಗಾರಿಗಳನ್ನು ದಲಿತ ಗುತ್ತಿಗೆದಾರರ ಬದಲಾಗಿ ಇತರ ಗುತ್ತಿಗೆದಾರರಿಗೆ ನೀಡಿ ದಲಿತರಿಗೆ ಮೋಸ ಮಾಡಲಾಗುತ್ತದೆ ಎಂದು ದೂರಿದ ಅವರು ಧರ್ಮಸ್ಥಳ ಅಶೋಕನಗರ ದಲಿತ ಕಾಲನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕ ದೀರಜ್ ರವರು ತಿಳಿಸಿದರು. ಶೇಖರ್ ಕುಕ್ಕೇಡಿ ಮಾತನಾಡಿ ಸಭೆಗೆ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು. ದಲಿತ ಸಮುದಾಯದ ಅತಿ ಹೆಚ್ಚು ಸಮಸ್ಯೆಗಳು ಈ ಇಲಾಖೆಗಳಿಗೆ ಸಂಬಂಧಿಸಿದ್ದು , ಅವರ ಗೈರು ಹಾಜರಿ ಸಮಸ್ಯೆಗಳು ಮತ್ತಷ್ಟು ಜಟಿಲಗೊಳ್ಳುತ್ತದೆ ಎಂದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡ ಸುಕುಮಾರ್ ದಿಡುಪೆ ಮಾತನಾಡಿ ಮಲವಂತಿಗೆ ಗ್ರಾಮದ ಮಲೆಕುಡಿಯ ಸಮುದಾಯ ಭವನವು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿ 6 ವರ್ಷಗಳಾದರೂ ಇನ್ನೂ ನಿರ್ಮಾಣವಾಗಿಲ್ಲ ಎಂದರು. ಪರಿಶಿಷ್ಟ ಜಾತಿ/ ಪಂಗಡಗಳ ವಸತಿ ನಿಲಯ , ವಸತಿ ಶಾಲೆಗಳಲ್ಲಿ ರಾತ್ರಿ ವೇಳೆಯಲ್ಲಿ ವಾರ್ಡನ್ ಗಳು ಇರುವುದಿಲ್ಲ. ಹಾಸ್ಟೆಲ್ ಗಳಲ್ಲಿ ಐದಾರು ವರ್ಷ ವಯಸ್ಸಿನ ಮಕ್ಕಳಿದ್ದು , ಮಕ್ಕಳ ರಕ್ಷಣಾ ಜವಾಬ್ದಾರಿ ಯಾರು ಎಂದು ಮುಖಂಡರು ಪ್ರಶ್ನಿಸಿದರು. ಬೆಳ್ತಂಗಡಿ ತಾಲೂಕಿನ ಐದಾರು ಗ್ರಾಮಗಳ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ , ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳು ವಂಚಿತಗೊಂಡಿದೆ ಎಂದು ಶೇಖರ ಲಾಯಿಲ ಗಮನ ಸೆಳೆದರು. ಕಳೆದ ಮಳೆಗಾಲದಲ್ಲಿ ಸವಣಾಲು ಗ್ರಾಮದ ಹಿತ್ತಿಲಪೇಲದಲ್ಲಿ ನದಿಯಲ್ಲಿ ಯುವಕರಿಬ್ಬರೂ ಕೊಚ್ಚಿಕೊಂಡು ಹೋಗಿ ಬದುಕುಳಿದಿದ್ದು , ಅಲ್ಲಿ ಇಲ್ಲಿಯ ತನಕ ಸೇತುವೆ ನಿರ್ಮಾಣವಾಗಿಲ್ಲ , ಕುತ್ಲೂರು ಗ್ರಾಮದಲ್ಲಿಯೂ ಸೇತುವೆ ಮುರಿದು ನಾಲ್ಕೈದು ವರ್ಷಗಳಾದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ ಎಂದರು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಡಿವೈಎಸ್ಪಿ ರೋಹಿಣಿ ಸಿ.ಕೆ ತಿಳಿಸಿದರು.
ಬೆಳ್ತಂಗಡಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಜಿ ಸುಬ್ಬಾಪುರ್ ಮಠ್ ಪ್ರಾಸ್ತಾವಿಕವಾಗಿ ಮಾತನಾಡಿ , ಸಭೆಯಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಬೆಳ್ತಂಗಡಿ , ವೇಣೂರು, ಧರ್ಮಸ್ಥಳ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಳು ಉಪಸ್ಥಿತರಿದ್ದರುಹೆಡ್ ಕಾನ್ಸ್ಟೇಬಲ್ ಅಭಿಜಿತ್ ಸ್ವಾಗತಿಸಿ, ಧನ್ಯವಾದವಿತ್ತರು.





