

ಬೆಳ್ತಂಗಡಿ; ಒಂದು ವಾರದಿಂದ ಬಿಡುವು ನೋಡಿದ್ದ ಮಳೆ ಕರಾವಳಿಯಾದ್ಯಂತ ಮತ್ತೆ ಬಿರುಸುಗೊಂಡಿದೆ. ಬೆಳ್ತಂಗಡಿ ತಾಲೂಕಿನಲ್ಲಿಯು ಬುಧವಾರ ಸಂಜೆಯಿಂದ ನಿರಂತರ ಮಳೆ ಆರಂಭಗೊಂಡಿದ್ದು ಜಿಲ್ಲೆಯಲ್ಲಿ ಐದು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಜೂ.12ರಿಂದ 16ರವರೆಗೆ ರಾಜ್ಯ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ನೀಡಿದೆ. ಈ ದಿನಗಳಲ್ಲಿ 200ಮಿ.ಮೀ.ಗೂ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ದಿನ ನಿರಂತರ ಮಳೆ ಸುರಿಯುವ ಸಾದ್ಯತೆ ಇದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಧ್ಯದಲ್ಲಿ ಮಳೆ ಬಿರುಸು ಕಡಿಮೆ ಇರುವ ಸಾಧ್ಯತೆಯನ್ನು ಹೇಳಲಾಗಿದೆ.
ಉಳಿದಂತೆ ರಾಜ್ಯದ ದಕ್ಷಿಣದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲದೇ ಉತ್ತರದ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲೂ ನಾಳೆ ರೆಡ್ ಅಲರ್ಟ್ನ ಘೋಷಣೆಯಾಗಿದ್ದು ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.
