ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಷಯದಲ್ಲಿ ಕಾನೂನು ಹೋರಾಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿಗೆ ಗಡಿಪಾರು ಮಾಡಿರುವ ಆದೇಶವನ್ನು ಪ್ರಶ್ನೆ ಮಾಡಿ ಅವರು ಸಲ್ಲಿಸಿದ್ದ ಕೊನೆಯ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿ ಆದೇಶ ಹೊರಡಿಸಿದೆ.
ಪುತ್ತೂರು ವಿಭಾಗಾಧಿಕಾರಿ (ಎಸಿ) ಅವರು ಮೂರನೇ ಬಾರಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಈ ಗಡಿಪಾರು ಆದೇಶವನ್ನು ಪ್ರಶ್ನೆ ಮಾಡಿ ತಿಮರೋಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ನಿಯಮಾವಳಿಗಳ ಪ್ರಕಾರ ಸರಕಾರದ ಮುಂದೆಯೇ ಮೇಲ್ಮನವಿ ಸಲ್ಲಿಸಿಕೊಳ್ಳುವಂತೆ ಸೂಚಿಸಿತ್ತು. ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನೆ ಮಾಡಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಮೊದಲಿಗೆ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಸುನೀಲ್ ದತ್ ಯಾದವ್ ಮತ್ತು ಎಸ್ ರಾಚಯ್ಯ ಅವರಿದ್ದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತ್ತು. ಆಗ ತಿಮರೋಡಿ ಪರ ವಕೀಲರು ಈ ಪ್ರಕರಣವು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದ್ದು, ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂದು ವಾದ ಮಾಡಿ ತಡೆ ಕೋರಿದ್ದರು.
ಆದರೆ ಸರಕಾರದ ಪರ ಅಡ್ವಕೇಟ್ ಜನರ್ ಕೆ. ಶಶಿಕಿರಣ್ ಶೆಟ್ಟಿ ಅವರು ಆಕ್ಷೇಪದ ಬಳಿಕ, ತಾಂತ್ರಿಕ ಕಾರಣ ನೀಡಿ ರಜಾಕಾಲೀನ ಪೀಠ ತಡೆ ನೀಡಲು ನಿರಾಕರಣೆ ಮಾಡಿತ್ತು. ಇದೀಗ ಈ ಇಡೀ ಪ್ರಕರಣದ ಅಂತಿಮ ಹಂತವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠವು ಮಹೇಶ್ ಶೆಟ್ಟಿ ತಿಮರೋಡಿ ಅವರ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದೆ. ಇದೀಗ ಎ.ಸಿ ನೀಡಿರುವ ಗಡಿಪಾರು ಆದೇಶ ಊರ್ಜಿತವಾಗಿದ್ದು ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ.









