ಬೆಂಗಳೂರು: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಏಕಸದಸ್ಯ ಪೀಠದಲ್ಲಿ ಮಾನ್ಯ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮುಂದಿರುವ ಅರ್ಜಿಯಲ್ಲಿ, ಕುವೆಟ್ಟು ಗ್ರಾಮ ಪಂಚಾಯತ್ ಹೊರಡಿಸಿದ್ದ 15.11.2025 ಹಾಗೂ 10.12.2025ರ ನಿರ್ಣಯಗಳ ಅನುಷ್ಠಾನಕ್ಕೆ ತಾತ್ಕಾಲಿಕ ಮಧ್ಯಂತರ ತಡೆ ಆದೇಶ ನೀಡಲಾಗಿದೆ.
2025–26 ಸಾಲಿನ ಸ್ವಂತ ನಿಧಿ ಕ್ರಿಯಾ ಶೀಲ ಯೋಜನೆಯ ಅನುಷ್ಠಾನದಲ್ಲಿ ವಾರ್ಡ್ ನಂ.1 ಅನ್ನು ಹೊರತುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ, ವಾರ್ಡ್ ನಂ.1 ರ ಪಂಚಾಯತ್ ಸದಸ್ಯರಾದ ಮುಸ್ತಫಾ ಗುರುವರಾಯಕರೆ, ಸಮೀರ್ ಸುನ್ನತ್ಕೆರೆ ಹಾಗೂ ಮೈಮೂನಾ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.
27 ಜನವರಿ 2026 ರಂದು ನ್ಯಾಯಾಲಯವು ಪ್ರತಿವಾದಿಗಳಾದ ರಾಜ್ಯ ಸರ್ಕಾರ, ದ.ಕ ಜಿಲ್ಲಾ ಪಂಚಾಯತ್, ಬೆಳ್ತಂಗಡಿ ತಾಲೂಕು ಪಂಚಾಯತ್, ಕುವೆಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಕುವೆಟ್ಟು ಪಂಚಾಯತ್ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿತ್ತು.
ಇಂದಿನ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ವಾರ್ಡ್ ನಂ.1 ಅನ್ನು ಮಾತ್ರ ಹೊರತುಗೊಳಿಸಿರುವುದು ಸಂವಿಧಾನದ ವಿಧಿ 14 ರ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದ್ದು, ಜೊತೆಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯು ನೀಡಿದ ನಿರ್ದೇಶನವನ್ನು ಪಾಲಿಸದೇ ಗ್ರಾಮ ಪಂಚಾಯತ್ ನಿರ್ಣಯ ಕೈಗೊಳ್ಳಲಾಗಿದೆ ಅಲ್ಲದೆ ಯೋಜನೆಯ ಮಾರ್ಗಸೂಚಿಗಳಲ್ಲಿ ವಾರ್ಡ್ವಾರು ಆಯ್ಕೆಯ ಮೂಲಕ ಹೊರತುಗೊಳಿಸುವ ಅವಕಾಶವಿಲ್ಲದಿದ್ದರೂ, ಅದಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಾದಿಸಲಾಯಿತು.
ನ್ಯಾಯಾಲಯವು ವಿವಾದಿತ ನಿರ್ಣಯಗಳ ಮುಂದಿನ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿದ್ದು, ಪ್ರಕರಣವು ಫೆಭ್ರವರಿ 17 ಕ್ಕೆ ಮುಂದಿನ ವಿಚಾರಣೆಗೆ ಮುಂದೂಡಿತು.
ಅರ್ಜಿದಾರರ ಪರವಾಗಿ ವಕೀಲರಾದ ಮುಸ್ತಫಾ ಬೆಳ್ತಂಗಡಿ ವಾದಿಸಿದರು.




