
ಉಜಿರೆ; ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.6ರಂದು ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ ನಡೆಯಿತು.
ಉಜಿರೆಯ ಸುರಕ್ಷಾ ಮೆಡಿಕಲ್ ಇದರ ಮಾಲಕರಾದ ಶ್ರೀಧರ್ ಕೆ.ವಿ ಇವರು ಉಚಿತ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೆಲವು ವರ್ಷಗಳ ಹಿಂದೆ ಸಾವಿರಕ್ಕೆ 14 ಮರಣ ಪ್ರಮಾಣ ಇತ್ತು. ಇದೀಗ 6.9ಕ್ಕೆ ಇಳಿದಿದೆ. ಇದಕ್ಕೆ ಮುಖ್ಯ ಕಾರಣ ಸುಧಾರಿತ ವೈದ್ಯಕೀಯ ಚಿಕಿತ್ಸೆ. ಉಜಿರೆ ಎಸ್.ಡಿ.ಎಂ ಆಸ್ಪತೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತಿದೆ. ಮಂಗಳೂರು ಬಿಟ್ಟರೆ ಸುಸಜ್ಜಿತ ಆಸ್ಪತ್ರೆಯಾಗಲಿ, ಪ್ರಯೋಗಾಲಯವಾಗಲಿ ಆಸುಪಾಸಿನಲ್ಲಿ ಇರಲಿಲ್ಲಿ. ಆ ದಿನಗಳಲ್ಲಿ ಎಷ್ಟೋ ಬಾರಿ ನಾನು ನನ್ನ ಮೆಡಿಕಲ್ ಶಾಪ್ ಮಧ್ಯರಾತ್ರಿ ತೆರೆದು ಜನರಿಗೆ ಔಷಧಿ ನೀಡಿದ್ದೇನೆ. ಪೂಜ್ಯರು ಉಜಿರೆಯಲ್ಲಿ ಎಸ್,ಡಿ.ಎಂ ಆಸ್ಪತ್ರೆಯನ್ನು ನಿರ್ಮಿಸಿದ ಬಳಿಕ ಬೆಳ್ತಂಗಡಿ ಮತ್ತು ಆಸುಪಾಸಿನ ತಾಲೂಕಿನ ಜನತೆಗೆ , ಸುಸಜ್ಜಿತ ಲ್ಯಾಬ್ ಮತ್ತು ಎಲ್ಲಾ ವೈದ್ಯಕೀಯ ಸೇವೆ ದೊರೆಯಿತು ಎಂದರು.
ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಇವರು ಮಾತನಾಡಿ-ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರು ಇದ್ದಾರೆ. ಮೂಳೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ 5 ಮಂದಿ ನುರಿತ ತಜ್ಞ ವೈದ್ಯರಿದ್ದು, ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಎಲ್ಲಾ ಶಸ್ತ್ರಚಿಕಿತ್ಸೆಗಳು ಇಲ್ಲಿ ನಡೆಸಲ್ಪಡುತ್ತಿದೆ. ತಾಲೂಕಿನಲ್ಲಿ ಮನೋರೋಗ ತಜ್ಞರು ಪ್ರತಿದಿನ ಲಭ್ಯವಿರುವ ಏಕೈಕ ಆಸ್ಪತ್ರೆ ಇದಾಗಿದೆ. ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದ, ಕಿವಿ-ಮೂಗು-ಗಂಟಲು ಸಂಬಂಧಿಸಿದ ಕೆಲವೊಂದು ಶಸ್ತ್ರಚಿಕಿತ್ಸೆಗಳನ್ನು ನಮ್ಮ ವೈದ್ಯರು ನಮ್ಮ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿದ್ದು, ಜನರ ಪಾಲಿಗೆ ಈ ಆಸ್ಪತ್ರೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಕ್ರಿಟಿಕಲ್ ಕ್ಯಾರ್ ತಜ್ಞರು ಮತ್ತು ನ್ಯೂರೋ ಸರ್ಜನ್ ನಮ್ಮ ಆಸ್ಪತ್ರೆಯಲ್ಲಿ ಪ್ರತಿದಿನ ಲಭ್ಯವಿರಲಿದ್ದು, ಪೂಜ್ಯ ಹೆಗ್ಗಡೆಯವರ ಆಶೀರ್ವಾದದಲ್ಲಿ ಶೀಘ್ರದಲ್ಲಿ ಎಂ.ಆರ್.ಐ ಸೇವೆ ಕೂಡ ದೊರೆಯಲಿದೆ ಎಂದರು.
ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಲೆ ಮತ್ತು ಕುತ್ತಿಗೆಯ ಆಂಕೊಸರ್ಜನ್, ಕಿವಿ-ಮೂಗು-ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇವತ್ತಿನ ಶಿಬಿರದಲ್ಲಿ ಕ್ಯಾನ್ಸರ್ ಸ್ಕ್ಯಾನಿಂಗ್ಗೆ ಹೆಚ್ಚು ಮಹತ್ವ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ರೋಗ ಪತ್ತೆ ಹಚ್ಚುವುದರಿಂದ ಮುಂದೆ ಸಂಭವಿಸಬಹುದಾದ ಭಯಾನಕ ತೊಂದರೆಯನ್ನು ಸುಲಭದಲ್ಲಿ ನಿವಾರಿಸಿಕೊಳ್ಳ ಬಹುದು. ಇದರೊಂದಿಗೆ ಈ ಶಿಬಿರದಲ್ಲಿ ಶ್ರವಣ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ ಕೂಡ ನಡೆಸಲಿದ್ದೇವೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಉಪಸ್ಥಿತರಿದ್ದು, ಶಿಬಿರಕ್ಕೆ ಶುಭಹಾರೈಸಿದರು. ಸ್ಟೋರ್ ಇನ್ಚಾರ್ಜ್ ಜಗನ್ನಾಥ ಎಂ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಷಕ್ಯೂಟಿವ್ ಸುಮಂತ್ ರೈ ಸಹಕರಿಸಿದರು.








