
ಮಂಗಳೂರು: ವಿಜಯ್ ದಿವಸ್ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲಾ ಸಮ್ಮೇಳನ ಡಿ.13ರಂದು ಕಡಬದ ನೆಲ್ಯಾಡಿಯ ಬಿರ್ವ ಸಭಾಂಗಣದಲ್ಲಿ ಬೆಳಗ್ಗೆ 9:30ರಿಂದ ನಡೆಯಲಿದೆ ಎಂದು ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ನೋಬರ್ಟ್ ರೋಡ್ರಿಗಸ್ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ 1971ರ ಇಂಡೋ-ಪಾಕ್ ಯುದ್ಧದಲ್ಲಿ ಭಾಗಿಯಾದ ದ.ಕ. ಜಿಲ್ಲೆಯ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್.ಕೆ., ಮಾಜಿ ಸಂಸದೆ ತೇಜಸ್ವಿನಿ ಗೌಡ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್, ಇಸಿಎಚ್ಎಸ್ ಆಯುಕ್ತ ಕರ್ನಲ್ ನಿತಿನ್ ಭಿಡೆ, ಕೌಕ್ರಾಡಿ ಗ್ರಾಪಂ ಅಧ್ಯಕ್ಷ ಉದಯ್ ಕುಮಾರ್ ಗೌಡ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಘಟಕದ ದ.ಕ. ಹಾಗೂ ಉಡುಪಿ ಜಿಲ್ಲಾ ಸಂಚಾಲಕ ಮ್ಯಾಥ್ಯೂ ಟಿ.ಜಿ. ಮಾತನಾಡಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟಿತ ಪ್ರಯತ್ನ ದ ಮೂಲಕ ಪರಿಹಾರ ಕಂಡುಕೊಳ್ಳಲು 2020, ಸೆ.21ರಂದು ಆರಂಭಗೊಂಡ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು ಇದೀಗ ರಾಜ್ಯದ 24 ಜಿಲ್ಲೆಗಳಲ್ಲಿ ಜಿಲ್ಲಾ ಘಟ ಕಗಳನ್ನು ಹೊಂದಿದೆ, ರಾಜ್ಯದಲ್ಲಿ 1.41 ಲಕ್ಷ ಮಂದಿ ಸದಸ್ಯರನ್ನು ಸಂಘ ಹೊಂದಿದೆ. 350 ಮಂದಿ ಮಾಜಿ ಸೈನಿಕರು ದ.ಕ. ಜಿಲ್ಲಾ ಘಟಕದ ಸದಸ್ಯತ್ವ ಪಡೆದಿದ್ದಾರೆ. ಮಾಜಿ ಸೈನಿಕರ ಸಮಸ್ಯೆಗಳಾದ ಪುನರ್ವಸತಿ, ಉದ್ಯೋಗ, ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರತವಾಗಿದೆ ಎಂದು ಮಾಹಿತಿ ನೀಡಿದರು.
ಈ ಸಮ್ಮೇಳನದಲ್ಲಿ ಮಾಜಿ ಸೈನಿಕರ ಸಂಘದ ಬಲವರ್ಧನೆಯೊಂದಿಗೆ ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಂಘದ ಕಡಬ ತಾಲೂಕು ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ. ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಘಟಕದ ಕೋಶಾಧಿಕಾರಿ ಚಂದಪ್ಪ ಡಿ.ಎಸ್., ಬಂಟ್ವಾಳ ಘಟಕದ ಉಪಾಧ್ಯಕ್ಷ ಧನಂಜಯ ನಾಯೋಟು, ಬೆಳ್ತಂಗಡಿ ಘಟಕದ ಅಧ್ಯಕ್ಷ ತಂಗಚ್ಚನ್, ಪುತ್ತೂರು ಘಟಕದ ಅಧ್ಯಕ್ಷ ಗೋಪಾಲ ವಿ. ಬನ್ನೂರು ಉಪಸ್ಥಿತರಿದ್ದರು









