


ಬೆಳ್ತಂಗಡಿ; ಸಿಯೋನ್ ಆಶ್ರಮ ಟ್ರಸ್ಟ್(ರಿ.) ಗಂಡಿಬಾಗಿಲು ಇಲ್ಲಿ ಅ 2 ರಂದು ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರಪಿತ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿಯವರಾದ ಡಾ.ಯು.ಸಿ. ಪೌಲೋಸ್ ಮಾತನಾಡಿ, ರಾಷ್ಟ್ರಪಿತ ಗಾಂಧೀಜಿಯವರ ಅಹಿಂಸೆಯ ಚೈತನ್ಯವು ನಮ್ಮನ್ನು ಶಾಂತಿಯುತ ಪ್ರಪಂಚದತ್ತ ಮುನ್ನಡೆಸಲಿ. ನಮ್ಮ ರಾಷ್ಟ್ರಪಿತರ ಬದುಕು, ಬೋಧನೆ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. ಸಿಯೋನ್ ಆಶ್ರಮದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸುವ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಹಿರಿಯರನ್ನು ಗೌರವಿಸಿ, ನೆಮ್ಮದಿಯ ಬದುಕು ಕಲ್ಪಿಸಿಕೊಡುವುದರಿಂದ ಮಾನವ ಜನ್ಮ ಸಾರ್ಥಕವಾಗಿಸಬಹುದೆಂದರು ಹಾಗೂ ಸಿಯೋನ್ ಆಶ್ರಮದಲ್ಲಿ ಯಾವುದೇ ಜಾತಿ-ಮತ, ಬೇಧ-ಭಾವವಿಲ್ಲದೇ ಬೇರೆ ಬೇರೆ ಧರ್ಮದ ಮೂವರು ಹಿರಿಯ ನಾಗರಿಕರನ್ನು ಗುರುತಿಸಿ, ಪ್ರತಿ ವರ್ಷ ಸನ್ಮಾನಿಸಲಾಗುವುದೆಂದು ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ಹಿರಿಯನಾಗರಿಕರಾದ ನಿಡ್ಲೆ ಗ್ರಾಮದ ಪಿಲಿಕಜೆ ಎಂಬಲ್ಲಿ ವಾಸವಾಗಿರುವ ಚಿನ್ನಮ್ಮ, ಮಾಲಾಡಿ ಗ್ರಾಮದ ಮಾರ್ನಿಂಗ್ ಸ್ಟಾರ್ ಎಂಬಲ್ಲಿ ವಾಸವಾಗಿರುವ ಜೆರಾಲ್ಡ್ ಮೋರಸ್ ಹಾಗೂ ಕೊಲ್ಪೆದಬೈಲು ನಿವಾಸಿ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಇವರುಗಳನ್ನು ಪ್ರಮಾಣ ಪತ್ರ, ಫಲಪುಷ್ಪಗಳೊಂದಿಗೆ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿಸಲ್ಪಟ್ಟ ಹಿರಿಯ ನಾಗರಿಕರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಟ್ರಸ್ಟೀ ಸದಸ್ಯರಾದ ಮೇರಿ ಯು.ಪಿ., ಸಂಸ್ಥೆಯ ವೈದ್ಯಾಧಿಕಾರಿ ಡಾ.ಶಿವಾನಂದ ಸ್ವಾಮಿ, ರೋಸರಿ ಡಿವೋಟರ್ ಬೇಬಿ, ಸಂಸ್ಥೆಯ ಆಡಳಿತಾಧಿಕಾರಿ ಶೋಭಾ ಯು.ಪಿ., ಲೆಕ್ಕಾಧಿಕಾರಿ ಸೌಮ್ಯ ಯು.ಪಿ. ಹಾಗೂ ಅಶ್ರಮನಿವಾಸಿಯಾದ ಅನಿಲ್ ರವರು ವೇದಿಕೆಯನ್ನಲಂಕರಿಸಿದ್ದರು.
ಸಿಯೋನ್ ಆಶ್ರಮದ ಆಡಳಿತಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮ ನಿವಾಸಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು, ವೈದ್ಯಾಧಿಕಾರಿ ಡಾ.ಶಿವಾನಂದ ಸ್ವಾಮಿಯವರು ಸ್ವಾಗತಿಸಿ, ಸಿಬ್ಬಂದಿ ಆಶಾರವರು ವಂದಿಸಿದರು.
