ಬೆಳ್ತಂಗಡಿ; ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳದಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಾ ನಿರಂತರವಾಗಿ ಜಾನುವಾರು ಹತ್ಯೆ ಮಾಡುತ್ತಿದ್ದ ಆರೋಪದಲ್ಲಿ ಹಸನಬ್ಬ ಎಂಬಾತನ ಮನೆಯನ್ನು ಹಾಗೂ ಅಕ್ರಮ ಕಸಾಯಿಖಾನೆಯನ್ನು ಮಂಗಳೂರು ವಿಭಾಗಾಧಿಕಾರಿಯವರ ಆದೇಶದಂತೆ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.
ಆರೋಪಿಯ ವಿರುದ್ದ ಈಗಾಗಲೆ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಹಲವು ದೂರುಗಳು ಪ್ರಕರಣಗಳು ಇದ್ದು ಆತ ಅದನ್ನು ನಿರಂತರವಾಗಿ ಕಾನೂನನ್ನು ಉಲ್ಲಂಘಿಸಿ ಮಾಡುತ್ತಾ ಬಂದಿದ್ದಾನೆ ಎಂದು ಆರೋಪಿಸಿ ಇದೀಗ ಈತನ ಮನೆಯನ್ನು ಮುಟ್ಟುಗೋಲು ಹಾಕಲಾಗಿದೆ.
ಈ ಬಗ್ಗೆ ಸಹಾಯಕ ಆಯುಕ್ತರು ಮತ್ತು ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಇವರ ಆದೇಶದಂತೆ ಪುದು ಗ್ರಾಮದ ಮಾರಿಪಳ್ಳದ ಪಾಡಿ ಎಂಬಲ್ಲಿರುವ ಹಸನಬ್ಬ ಅವರಿಗೆ ಸೇರಿದ ಮನೆ ನಂಬರ್ 6-54 ಹಾಗೂ ಅಕ್ರಮ ಕಸಾಯಿಖಾನೆ 6-54(1) ಅನ್ನು ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳಲ್ಲಿ ಮನೆ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಮಾಡಿರುವ ಮೊದಲ ಪ್ರಕರಣ ಇದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.
