


ಬೆಳ್ತಂಗಡಿ : ಧರ್ಮಸ್ಥಳ ಗ್ರಾಮಕ್ಕೆ ಸೇರಿದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ ನಾಲ್ಕು “ಅಪರಿಚಿತ ಸಾವುಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಇವು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವುದರಿಂದ ವಿಶೇಷ ತನಿಖಾ ದಳ (SIT) ತಕ್ಷಣ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೌಜನ್ಯ ಪರ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಎಸ್.ಐ.ಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಗುರುವಾರ ರಾತ್ರಿ ಬೆಳ್ತಂಗಡಿ ಎಸ್ ಐಟಿ ಕಛೇರಿಗೆ ಮಹೇಶ್ ಶೆಟ್ಟಿಯವರು ಭೇಟಿ ನೀಡಿದ್ದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಆಧರಿಸಿ ಈ ದೂರನ್ನು
ನೀಡಿದ್ದಾರೆ. ಇದರೊಂದಿಗೆ ಮಾಹಿತಿ ಹಕ್ಕಿನಲ್ಲಿ ಪಡೆದಿದ್ದ ದಾಖಲೆಗಳನ್ನು ನೀಡಿರುವುದಾಗಿ ತಿಳಿದು ಬಂದಿದೆ.
ಮಹೇಶ್ ಶೆಟ್ಟಿ ತಿಮರೋಡಿ ಅವರು ನೀಡಿರುವ ದೂರಿನಲ್ಲಿ, ಗಾಯತ್ರಿ, ಶಾರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ನಡೆದ ನಾಲ್ಕು ಸಾವುಗಳನ್ನು ಪ್ರಸ್ತಾಪಿಸಲಾಗಿದ್ದು, ಇವುಗಳನ್ನು “ಅಪರಿಚಿತ ಶವಗಳೆಂದು ಘೋಷಿಸಿ ಗ್ರಾಮ ಪಂಚಾಯತ್ ಮೂಲಕ ತರಾತುರಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಗಳಲ್ಲಿ ಕೇವಲ UDR (ಅಸ್ವಾಭಾವಿಕ ಮರಣ ವರದಿ) ದಾಖಲಿಸಲಾಗಿದ್ದು, ಕೊಲೆ ಅಥವಾ ಆತ್ಮಹತ್ಯೆಯ ಸಂಶಯವಿದ್ದರೂ ಎಫ್.ಐ.ಆರ್ ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ದೂರಿನಲ್ಲಿ ಆರೋಪಿಸಿದ್ದಾರೆ
