


ಧರ್ಮಸ್ಥಳ: ಇಲ್ಲಿಯ ಬೋಳಿಯರ್ ನಲ್ಲಿ ಎರಡು ಮೂರು ವಾರದಿಂದ ಬೀಡುಬಿಟ್ಟಿರುವ ಕಾಡಾನೆಯು ಇಂದು(ಆ.9) ಬೆಳಿಗ್ಗೆ ಮತ್ತೆ ರಸ್ತೆಯ ಬದಿ ಪ್ರತ್ಯಕ್ಷವಾಗಿದೆ.
ಶಾಲಾ ಮಕ್ಕಳು ಬಸ್ ಗೆ ಕಾಯುತ್ತಿರುವ ವೇಳೆ ಕಾಡಾನೆಯು ಪ್ರತ್ಯಕ್ಷವಾಗಿದ್ದು ಯಾವುದೇ ತೊಂದರೆ ಮಾಡದೆ ಬೋಳಿಯಾರ್ ನಿಂದ ಅರಣ್ಯಕ್ಕೆ ಹೋಗಿದೆ.
ರಾತ್ರಿ ಹೊತ್ತು ಕಾಣಿಸುತ್ತಿದ್ದ ಕಾಡಾನೆಗಳು ಕಳೆದ ಕೆಲ ದಿನಗಳಿಂದ ಬೊಳಿಯಾರು ಪರಿಸರದಲ್ಲಿ ಹಗಲು ಹೊತ್ತಿನಲ್ಲಿಯೇ ಓಡಾಟ ನಡೆಸುತ್ತಿದ್ದು ಸಾರ್ವಜನಿಕರಲ್ಲಿ ಭಯ ಮೂಡಿಸಲು ಕಾರಣವಾಗಿದೆ. ವಾರದ ಹಿಂದೆ ಇಲ್ಲಿ ಕಾಡಾನೆ ಶಾಲೆಗೆ ಹೋಗಲು ಬಸ್ ಕಾಯುತ್ತಿದ್ದ ಮಕ್ಕಳತ್ತ ನುಗ್ಗಿತ್ತು. ಮಕ್ಕಳು ಓಡಿ ತಪ್ಪಿಸಿಕೊಂಡಿದ್ದರು. ಇದೀಗ ಇಲ್ಲಿರುವ ಕಾಡಾನೆಗಳನ್ನು ದಟ್ಟ ಅರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.
