

ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಹಾವಳಿ ತೀವ್ರವಾಗಿದ್ದು ಕೃಷಿಕರು ಆತಂಕ ಪಡುವಂತಹ ವಾತಾವರಣವಿದ್ದು ಕಾಡಾನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಯಿಸಿ ಕೆ.ಎಸ್.ಎಂ.ಸಿ. ಎ ವತಿಯಿಂದ ಜು 21 ಸೋಮವಾರ ಬೆಳ್ತಂಗಡಿಯಲ್ಲಿ ಮೆರವಣಿಗೆ ನಡೆಸಿ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಎಂ.ಸಿ ಎ ಅಧ್ಯಕ್ಷ ಬಿಟ್ಟಿ ನೆಡುನಿಲಂ ತಿಳಿಸಿದ್ದಾರೆ.
ಬೆಳ್ತಂಗಡಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ಮಲೆನಾಡಿನ ಭಾಗಗಳಲ್ಲಿ ಕಾಡಾನೆ ಹಾವಳಿ ತೀರಾ ಹೆಚ್ಚಾಗಿದೆ. ಕೃಷಿಕರು ತಮ್ಮ ತೋಟಗಳಿಗೆ ತೆರಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಒಬ್ಬ ಕೃಷಿಕ ಆನೆ ದಾಳಿಗೆ ಬಲಿಯಾಗಿದ್ದಾರೆ. ಆನೆಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ನೀಡಲಾಗುವುದು ಎಂದು ತಿಳಿಸಿದರು. ಶಾಸಕ ಹರೀಶ್ ಪೂಂಜ ಅವರನ್ನು ಈ ಬಗ್ಗೆ ಮಾತನಾಡಿಸಿದ್ದು ಅವರು ಅದೇ ದಿನ ಬಂದು ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುವುದಾಗಿ ತಿಳಿಸಿದ್ದಾರೆ.ಅವರಿಗೂ ಈ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸೋಮವಾರ ಬೆಳಗ್ಗೆ ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಮೆರವಣಿಗೆ ಆರಂಭಿಸಿ
ಮೂರುಮಾರ್ಗದ ಮೂಲಕ ಬೆಳ್ತಂಗಡಿ ಅರಣ್ಯ ಇಲಾಖೆಯ ಕಚೇರಿಯವರೆಗೆ ಮೆರವಣಿಗೆ ಯಲ್ಲಿ ಬಂದು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಾಡಾನೆ ಹಾವಳಿ ಬಗ್ಗೆ ಈಗಾಗಲೇ ಹಲವಾರು ಮನವಿಗಳನ್ನು ನೀಡಿದ್ದರೂ ಸರಕಾರ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಇದೇ ಸ್ಥಿತಿ ಮುಂದುವರಿದರೆ ಕೃಷಿಕರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಈ ಹಿನ್ನಲೆಯಲ್ಲಿ ಮೊದಲ ಹಂತವಾಗಿ ಮನವಿ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ ಆನೆ ಹಾವಳಿ ತಡೆಯಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಉಗ್ರ ರೂಪದ ಹೋರಾಟವನ್ನು ನಡೆಸುವುದಾಗಿ ಅವರು ತಿಳಿಸಿದರು.
ಈ ಹೋರಾಟ ಯಾವುದೆ ಒಂದು ಧರ್ಮಕ್ಕೆ, ಸಮುದಾಯಕ್ಕೆ ಸೀಮಿತವಾದ ವಿಚಾರವಲ್ಲ ಆನೆದಾಳಿಯಿಂದ ಸಂತ್ರಸ್ತರಾದ ಎಲ್ಲರನ್ನೂ ಒಳಗೊಂಡಿರುವ ಹೋರಾಟವಾಗಿದ್ದು ಎಲ್ಲ ಸಂತ್ರಸ್ತರು ಮನವಿ ನೀಡುವ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ, ಪಿ.ಆರ್.ಒ ಸೆಬಾಸ್ಟಿಯನ್ನ ಪಿ.ಸಿ ಯುವ ಘಟಕದ ಸಂಚಾಲಕ ರೋಬಿನ್ ಓಡಂಪಳ್ಳಿ, ಧರ್ಮಸ್ಥಳ ವಲಯ ಅಧ್ಯಕ್ಷ ಜೈಸನ್ ಪಟ್ಟೇರಿ ಉಪಸ್ಥಿತರಿದ್ದರು
