

ಮಂಗಳೂರು;
ಮಹಿಳೆಯೊಬ್ಬರಿಗೆ ಮಾಟ, ಮಂತ್ರ ಮಾಡಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಆರೋಪ ಆಧಾರದಲ್ಲಿ ಗುರುವಾಯನಕೆರೆಯ ನಿವಾಸಿ ಜಿ. ಅಬ್ದುಲ್ ಕರೀಮ್ ಎಂಬಾತನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
2022ರಲ್ಲಿ ಸಂತ್ರಸ್ತೆಗೆ ಖನ್ನತೆಯ ಸಮಸ್ಯೆ ಉಂಟಾಗಿತ್ತು. ಆಕೆ ತನ್ನ ಸಂಬಂಧಿಯ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಮಂತ್ರವಾದಿ ಅಬ್ದುಲ್ ಕರೀಮ್ ನಿಮಗೆ ಯಾರೋ ಮಾಟ ಮಂತ್ರ ಮಾಡಿದ್ದಾರೆ. ಅದನ್ನು ಪರಿಹರಿಸಬೇಕು. ಎಂದು ಹೇಳಿದನೆನ್ನಲಾಗಿದೆ. ನಂತರ ಮಾಟ-ಮಂತ್ರ ನಿವಾರಿಸುವ ಚಿಕಿತ್ಸೆ ಕೊಡುತ್ತೇನೆ ಎಂದು ನಂಬಿಸಿ ಆ ಮಹಿಳೆಯನ್ನು ಆಗಾಗ ಬರಲು ತಿಳಿಸಿ ವಂಚಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳೆ ತನ್ನ ಅಕ್ಕನ ಜತೆ ಈ ವ್ಯಕ್ತಿ ಬಳಿ ಹಲವು ಬಾರಿ ಬಂದಿದ್ದು. ಅಲ್ಲಿ ಆತ ಕೆಲವು ಬಾರಿ ಮಹಿಳೆಗೆ ಮಂತ್ರ ಓದಿಸಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
2022ರ ಫೆಬ್ರವರಿಯಲ್ಲಿ ಸಂತ್ರಸ್ತೆಯ ಅಕ್ಕನಿಗೆ ಕೆಲಸ ಇದ್ದ ಕಾರಣ ಸಂತ್ರಸ್ತೆ ಒಬ್ಬಳೇ ಹೆಜಮಾಡಿ ಮನೆಗೆ ಹೋಗಿದ್ದು, ಅಲ್ಲಿ ಉಸ್ತಾದ್ ಆಕೆಯಲ್ಲಿ ಮಂತ್ರ ಪಠಿಸಿ, ಆಕೆಯ ಮೈಮುಟ್ಟಿ ಕಿರುಕುಳ ನೀಡಿದ್ದು, ಮಾತ್ರವಲ್ಲದೆ ಮಹಿಳೆಯಿಂದ 55 ಸಾವಿರ ರೂ. ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಒಟ್ಟು ಸುಮಾರು ಒಂದು ಲಕ್ಷ ರೂಪಾಯಿ ಪಡೆದು ಈತ ವಂಚಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
