

ಬೆಳ್ತಂಗಡಿ: ನಂಬಿಕೆ, ವಿಶ್ವಾಸ ಮತ್ತು ನಿರೀಕ್ಷೆಗಳನ್ನು ಸಮಾಜದಲ್ಲಿ ಮೂಡಿಸುವುದು ಮಾಧ್ಯಮಗಳ ಕೆಲಸವಾಗಿದೆ. ಮಾಧ್ಯಮಗಳು ಸಮಾಜದ ನಂಬಿಕೆ ಉಳಿಸಿಕೊಳ್ಳಬೇಕಾದರೆ ದಮನಿತರ ಧ್ವನಿಯಾಗಬೇಕು. ಆಗ ಅವುಗಳ ಅಸ್ತಿತ್ವವೂ ಉಳಿಯುತ್ತದೆ ಎಂದು
ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದೊಂದಿಗೆ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ (ಪದವಿ ಮತ್ತು ಸ್ನಾತಕೋತ್ತರ), ಬಿ.ವೋಕ್ ವಿಭಾಗ (ಡಿಜಿಟಲ್ ಮೀಡಿಯಾ ಆ್ಯಂಡ್ ಫಿಲ್ಮ್ ಮೇಕಿಂಗ್) ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಸಮೂಹ ಮಾಧ್ಯಮ ವೃತ್ತಿಪರತೆ ಮತ್ತು ಸದ್ಯದ ಸವಾಲುಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ‘ಮಾಧ್ಯಮ ಪರ್ವ’ ಉತ್ಸವ ಕಾರ್ಯಕ್ರಮದಲ್ಲಿ
ಪ್ರಧಾನ ಆಶಯವನ್ನು ಪ್ರಸ್ತುತಪಡಿಸಿ ಮಾತನಾಡಿದರು.
ಸಾಮಾಜಿಕ ಮಾಧ್ಯಮಗಳ ಕಾರಣದಿಂದ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸವಾಲುಗಳು ಎದುರಾಗಿವೆ. ಇವುಗಳನ್ನು ಎದುರಿಸಬೇಕಾದರೆ ಮಾಧ್ಯಮದ ವಿದ್ಯಾರ್ಥಿಗಳು ಪತ್ರಿಕೋದ್ಯಮದ ಆಶಯ ಮತ್ತು ನೈತಿಕತೆಯನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿರಾದ ವರ್ಧಮಾನ್ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷ, ಶಿಕ್ಷಣ ತಜ್ಞ ಸಂಜಯ್ ಎಸ್. ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ವೇಗವಾಗಿ ಪ್ರಸಾರವಾಗುತ್ತಿವೆ. ಅವುಗಳಲ್ಲಿ ಸತ್ಯ ಮತ್ತು ವಸ್ತುನಿಷ್ಠತೆ ಕಾಯ್ದುಕೊಳ್ಳುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಂಶೋಧನಾತ್ಮಕವಾಗಿ ಕಾರ್ಯನಿರ್ವಹಿಸಿದರೆ ಸುದ್ದಿಗಳಲ್ಲಿ ನಿಖರತೆ ಕಾಯ್ದುಕೊಳ್ಳಬಹುದು. ಯುವಜನರ ವ್ಯವಸ್ಥಿತ ಭಾಗವಹಿಸುವಿಕೆಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಾಧ್ಯಮಗಳು ಪ್ರಜಾಪ್ರಭುತ್ವದ ಜೀವಾಳ. ಪತ್ರಕರ್ತರು ಸಮರ್ಪಕವಾಗಿ ಕೆಲಸ ಮಾಡಿದಾಗ ಪ್ರಜಾಪ್ರಭುತ್ವ ಸದೃಢವಾಗಿ ಉಳಿಯುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ವಿರಾಟ್ ಪದ್ಮನಾಭ ಅವರ ‘ಬೆಟ್ಟದ ಹೂವು’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ಉದ್ಘಾಟನಾ ಸಮಾರಂಭದ ಕುರಿತು ಪದವಿ ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ತಕ್ಷಣಕ್ಕೆ ಸಂಯೋಜಿಸಿದ ‘ಚಿಗುರು’ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆ ಅನಾವರಣಗೊಳಿಸಲಾಯಿತು.
ಆಯೇಶಾ ಖಾನಂ, ಸಂಜಯ್ ಎಸ್. ಗೌಡ ಮತ್ತು ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಎಂ., ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ಪ್ರಬಂಧಕ ಶೇಖರ್ ಮತ್ತು ಉದ್ಯಮಿ ಶ್ರೀನಿವಾಸ ಗಲಗಲಿ ಅವರನ್ನು ಸನ್ಮಾನಿಸಲಾಯಿತು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನೈದಿಲೆ ಮತ್ತು ಸಿಂಚನ ನಿರೂಪಿಸಿದರು. ಸಹನಾ ವಂದಿಸಿದರು.
